Monday, October 29, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.12 ಶ್ರೀ ಮಾರಿಕಾಂಬಾ ಪ್ರಸೀದತು ....!!!


ಶ್ರೀ ಮಾರಿಕಾಂಬೆ ದೇವಾಲಯದ ದೃಶ್ಯ.


 "ಸಾರ್  ಬನ್ನಿ ನಮ್ಮೂರಿನ ಪ್ರಸಿದ್ದ ಮಾರಿಕಂಬಾ ದೇವಾಲಯ ಇದು, ನಿಮಗೆ ಖಂಡಿತಾ ಇಷ್ಟಾ ಆಗುತ್ತೆ" ಅಂತಾ ಹರ್ಷ ನನ್ನ ಕೈ ಹಿಡಿದು ಕರೆದುಕೊಂಡು ಹೊರಟ . ಜಾತ್ರೆಯ ಪ್ರಯುಕ್ತಾ ಜನ ಜಂಗುಳಿ ಜಾಸ್ತಿ ಇತ್ತು. ವಿಶಾಲವಾದ ಮಾರಿಕಾಂಬೆ ಯ ದೇವಾಲಯದ ಭವ್ಯ ನೋಟ ಕಣ್ಣನ್ನು ತುಂಬಿತ್ತು. ಹಾಗೆ ಮುಂದೆ  ಸಾಗಿದ ನಮ್ಮನ್ನು  ಪ್ರವೇಶ ದ್ವಾರದಲ್ಲಿ ಸುಂದರವಾಗಿ ಅಲಂಕರಿಸಿ  ನಿರ್ಮಾಣ ಮಾಡಲಾಗಿದ್ದ ಎರಡು ಆನೆಗಳ ಮೂರ್ತಿಗಳು ಸ್ವಾಗತ ಕೋರಿದವು.




ದೇವಾಲಯದ ಹೆಬ್ಬಾಗಿಲ ಕಮಾನು.




ದೇವಾಲಯದ ಹೆಬ್ಬಾಗಿಲ ಸನಿಹ ಬಂದ ನಮಗೆ ಮುಖ್ಯ ದ್ವಾರದ ಮೇಲಿನ ಕಮಾನಿನಲ್ಲಿ  ಸುಂದರವಾಗಿ  ವಿನಾಯಕನ ಚಿತ್ರ ಬಿಡಿಸಲಾಗಿತ್ತು.ವಿನಾಯಕನ ಎರಡೂ ಬದಿಯಲ್ಲಿ ಸೇವೆ ಸಲ್ಲಿಸುವ ಇಬ್ಬರು ಸಖಿಯರು, ಹಾಗು ವಿನಾಯಕನ ಕಾಲಬಳಿ ಹಾದು ಹೋಗಿರುವ ಹಾವಿನ   ಚಿತ್ರ ಬಿಡಿಸಲಾಗಿತ್ತು .  ಅದೇ ಕಮಾನಿನಲ್ಲಿ ಶ್ರೀ ಮಾರಿಕಾಂಬಾ ಪ್ರಸೀದತು ಎಂಬ ಬರಹ ಬಹಳ ಖುಷಿ ನೀಡಿತು. ಕ್ಯಾಮರಾ ಲೆನ್ಸ್  ಜೂಮ್  ಮಾಡಿದೆ , ಅಚ್ಚರಿಯಾಯಿತು. ಅಲ್ಲಿ ಅನಾವರಣ ಆಗಿತ್ತು  ವಿಶಿಷ್ಟವಾದ  "ಕಾವಿ ಕಲೆ "!!!   .  ಕಡಲತೀರದ ಕೊಂಕಣಿ ಜನಾಂಗದವರು ಬಹಳ ಪುರಾತನಕಾಲದಿಂದ ಈ ಕಲೆಯಲ್ಲಿ ಸಿದ್ದಹಸ್ತರೆಂದು,  ಈ  "ಕಾವಿ ಕಲೆ" ಯು 1500-1775 ರ ಅವಧಿಯಲ್ಲಿ ಗೋವಾ ಹಾಗು ಕಡಲ ತಡಿಯ ಕರಾವಳಿ  ಕರ್ನಾಟಕಕ್ಕೇ ಬಂತೆಂದು ಇತಿಹಾಸಕಾರರು ಹೇಳುತ್ತಾರೆ .ಈ ಕಲೆಯಲ್ಲಿ ಮೂಡುವ ಕೆಂಪು ಬಣ್ಣವನ್ನು "ಉರ ಮಂಜು" ಎಂಬ ಪದಾರ್ಥದಿಂದ ತಯಾರಿಸುವುದಾಗಿ ತಿಳಿದುಬರುತ್ತದೆ. ಇದಕ್ಕೆ ಕ್ಯಾನ್ವಾಸ್ ಆಗಿ ಬಳಸುವ ಗೋಡೆಯನ್ನು  ನದಿ ತೀರದ ಮರಳು,ಕಪ್ಪೆಚಿಪ್ಪು, ಸುಣ್ಣ, ಬೆಲ್ಲ ಇವುಗಳನ್ನು  ಸಂಸ್ಕರಿಸಿ ಅರೆದು ಬಂದ ಮಿಶ್ರಣ ದಿಂದ ನಿರ್ಮಿಸಲಾಗುತ್ತಿತ್ತು.  ಇಂತಹ ಕಲೆಗಳನ್ನು  ಕಡಲ ತಡಿಯ ಊರುಗಳಲ್ಲಿರುವ  ಹಲವು ದೇವಾಲಯಗಳಲ್ಲಿ ಕಾಣಬಹುದು .



ದೇವಾಲಯದ ಒಳ ಗೋಡೆಗಳಲ್ಲಿನ ಚಿತ್ತಾರ.
ಗೋಡೆಗಳಲ್ಲಿ ಕಾವಿ ಕಲೆಯ  ಅನಾವರಣ 



ಇಡೀ ಮಾರಿಕಾಂಬ ದೇವಾಲಯದ  ಹೊರ ಮತ್ತು ಒಳಗೋಡೆಗಳಲ್ಲಿ  "ಕಾವಿ ಕಲೆ" ಯನ್ನು ಕಾಣಬಹುದು. ಇಡೀ ದೇವಾಲಯವೇ "ಕಾವಿ ಕಲೆ" ಯ ಕಲಾಮಂದಿರದಂತೆ ಗೋಚರಿಸುತ್ತದೆ. ಸುಂದರ ದೃಶ್ಯಗಳನ್ನು  ನೋಡುತ್ತಾ  ದೇವಾಲಯದ ಪ್ರದಕ್ಷಿಣ ಪಥದಲ್ಲಿ ಸಾಗಿದೆವು  ಜಾತ್ರೆ ಸಮಯ ಆಗಿದ್ದ ಕಾರಣ ಭಕ್ತರ ಸಂಖ್ಯೆ ಹೆಚ್ಚಿತ್ತು. ದೇವಾಲದ ಒಳ ಗೋಡೆಗಳಲ್ಲಿನ  ಚಿತ್ರಗಳನ್ನು ಗಮನಿಸುತ್ತಾ  ಕ್ಯಾಮರಾದಲ್ಲಿ ಚಿತ್ರ ತೆಗೆಯುತ್ತಾ ಹೊರಟೆ.



ಚಿತ್ರದ ಭಾವನೆಗಳನ್ನು ಗಮನಿಸಿ 

ಟಗರಿನ ಮೇಲೆ ಕುಳಿತ ದೇವತೆ.

ಗರುಡನ ಮೇಲೆ ಕುಳಿತ ವಿಷ್ಣು.

ಕನ್ಯಕಾ ಪರಮೇಶ್ವರಿ 

 ಗೋಡೆಯಲ್ಲಿ ಮಹಾಭಾರತದ , ರಾಮಾಯಣದ ಕೆಲವು ದೃಶ್ಯಗಳು ರಚಿಸಿದಂತೆ ಕಾಣುವುದೆಂದು ಕೆಲವು ಇತಿಹಾಸ ಕಾರರು ಹೇಳಿದ್ದರೂ ಅವರು ಹೇಳಿದ್ದ ಮಾತುಗಳಿಗೂ ಇಲ್ಲಿ ಕಂಡ ಚಿತ್ರಗಳಿಗೂ ಹೋಲಿಕೆಯಾಗಲಿಲ್ಲ , ಈ ಚಿತ್ರ ವೈಭವದ ಬಗ್ಗೆ ತಿಳಿಸಲು ನಮಗೆ ಯಾರೂ ಸಿಗಲಿಲ್ಲ ಹಾಗೆ ಮುಂದುವರೆದು ಮತ್ತಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದೆ.ಈ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಸಿಕ್ಕಲಿಲ್ಲ.





ಶಿರಸಿ ಮಾರಿಕಾಂಬೆ  ಸನ್ನಿಧಿಯ ಕೋಣ 

ಚಿತ್ರ ತಾನೇ ಹೇಳಿದೆ.

ಹಾಗೆ ಮುಂದೆ ಬಂದಾಗ  ಕಾಣಿಸಿತು ಶ್ರೀ  ಮಾರಿಕಾಂಬೆ ಸನ್ನಿಧಿಯ  "ದೇವರ ಕೋಣ"   , ಈ ಕೋಣವನ್ನು  ನೋಡುತ್ತಿದ್ದಂತೆ ಜ್ಞಾಪಕಕ್ಕೆ ಬಂದಿದ್ದು  ಶಿರಸಿ ಮಾರಿಕಾಂಬೆ ದೇವಾಲಯದ ಇತಿಹಾಸ,  ,  ಈ ಇತಿಹಾಸವೋ ಹಿಂಸೆಯಿಂದ ಅಹಿಂಸೆ ಕಡೆಗೆ ಜನರನ್ನು ಪರಿವರ್ತಿಸಿದ  ಅದ್ಭುತ ನೈಜ  ಘಟನೆಗಳ ಹೂರಣವಾಗಿದೆ.  ಶಿರಸಿಯಿಂದ ಹಾನಗಲ್ ಕಡೆಗೆ ಹೋಗುವ ಹಾದಿಯಲ್ಲಿನ  ಒಂದು ಕೊಳದ ಬಳಿ  ಒಂದು ಎಂಟು ಅಡಿಯ ದೇವಿಯ ಕಟ್ಟಿಗೆಯ ಮೂರ್ತಿ ಸಿಕ್ಕುತ್ತದೆ. ಆ ಸಮಯದಲ್ಲಿ  ಶಿರಸಿಯು ಒಂದು ಕುಗ್ರಾಮವಾಗಿ ಸೋಂದೆ ರಾಜರ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಆಗ  ಸೋಂದೆ ರಾಜರಾಗಿದ್ದ "ಇಮ್ಮಡಿ ಸದಾಶಿವರಾಯ " [1678-1718,] ರ  ಕಾಲದಲ್ಲಿ ಅವರ ಅನುಮತಿ ಪಡೆದು  1689 ರಲ್ಲಿ ಶಿರಸಿಯ "ಮಾರಿಕಾಂಬೆ"  ಯ  ದೇವಾಲಯ ನಿರ್ಮಾಣ ಮಾಡುತ್ತಾರೆ. "ಮಾರಿಕಾಂಬೆ"  ಯನ್ನು ಗ್ರಾಮ ದೇವತೆಯಾಗಿ ಸ್ವೀಕರಿಸಿದ ಶಿರಸಿ ಗ್ರಾಮದ  ಭಕ್ತರು  ತಮ್ಮ  ಯಜಮಾನರುಗಳ  ನೇತೃತ್ವದಲ್ಲಿ ದೇವಾಲಯದ ಆಡಳಿತ ನಡೆಸಿಕೊಂಡು ಬರುತ್ತಾರೆ. 1850 ರಿಂದ 1875 ರವರೆಗಿನ ಬ್ರಿಟೀಶ್  ಆಡಳಿತ  ಅವಧಿಯಲ್ಲಿ  ದೇವಾಲಯಕ್ಕೆ ದೇವಾಲಯಕ್ಕೆ ಗರ್ಭಗುಡಿ, ಚಂದ್ರ ಶಾಲೆ, ಗೋಪುರ , ಮಹಾದ್ವಾರ  ಮುಂತಾದವುಗಳನ್ನು ನಿರ್ಮಾಣ  ಮಾಡಿದ್ದಾರೆ.




ಬಿಲ್ಲು ಹಿಡಿದ ಶ್ರೀ ರಾಮನೇ ಇವನು??
ಹಿಂದ ಸಮರ ಕಳೆಯ ದರ್ಶನವೇ.
 ನಮಗೆಲ್ಲಾ ತಿಳಿದಂತೆ ನಮ್ಮ ನಾಡಿನ ಪ್ರತೀ ಹಳ್ಳಿಯಲ್ಲೂ   ಒಂದೊಂದು ಮಾರಿ, ಅಥವಾ ಇತರ ಶಕ್ತಿ ದೇವತೆ ಯ ದೇವಾಲಯ  ಕಂಡು ಬರುತ್ತದೆ.  ಆ ಕಾಲದಲ್ಲಿ ಹಳ್ಳಿಗಳಿಗೆ  ಎರಗುತ್ತಿದ್ದ ಮಾರಕ ರೋಗಗಳಾದ ಪ್ಲೇಗು, ಕಾಲರ, ಸಿಡುಬು ಮುಂತಾದವುಗಳಿಂದ ಅಪಾರ ಪ್ರಮಾಣದಲ್ಲಿ ಜನರು  ಸಾಯುತ್ತಿದ್ದರು . ಅಪಾಯಕಾರಿ ರೋಗಗಳಿಂದ  ಮುಕ್ತಿ ಪಡೆಯಲು ಜನರು ತಮ್ಮ ಹಳ್ಳಿಯ ಮಾರಿ ,ಅಥವಾ ಇತರ ಶಕ್ತಿ ದೇವತೆಗಳ ಪೂಜೆ ಮಾಡುತ್ತಿದ್ದರು. ಶಿರಸಿಯಲ್ಲಿ ನೆಲೆಸಿರುವ "ಶ್ರೀ ಮಾರಿಕಾಂಬೆ" ಯು ಕರ್ನಾಟಕದ ಶಕ್ತಿ ದೇವತೆಗಳಲ್ಲೆಲ್ಲಾ  ಹೆಚ್ಚಿನ ಶಕ್ತಿ ಉಳ್ಳವಳೆಂದು  ಭಾವಿಸಿ  ಭಕ್ತರು ಆರಾಧಿಸುತ್ತಾರೆ.ಇಂದಿಗೂ ಈ ದೇವಿಯ ಭಕ್ತರು ವಿಶ್ವದೆಲ್ಲಡೆ  ಹರಡಿದ್ದಾರೆ




ಇದು ಮಹಾಭಾರತದ  ಸನ್ನಿವೇಶವೇ??

ಮೊದಲು  ಈ ದೇವಾಲಯದಲ್ಲಿ ಮೂಲ ಆಚರಣೆ  ಪ್ರಾಣಿಬಲಿ ನೀಡುವ ಮೂಲಕ ನಡೆಯುತ್ತಿತ್ತು, ಅಂದಿನ ದಿನಗಳಲ್ಲಿ ವಿಶೇಷವಾಗಿ ಕೋಣ, ಹಂದಿ, ಕೋಳಿ,ಕುರಿ ಮುಂತಾದ  ಪ್ರಾಣಿಗಳನ್ನು ಹೇರಳವಾಗಿ ಬಲಿ ನೀಡಿ  ಮಾರಿಕಾಂಬೆ ಯನ್ನು ಆರಾಧಿಸಲಾಗುತ್ತಿತ್ತು. ಜಾತ್ರೆಯ ವೇಳೆ  ಶಿರಸಿಯಲ್ಲಿ ಮೂಕ ಪ್ರಾಣಿಗಳ  ನೆತ್ತರ ಹೊಳೆ ಹರಿಯುತ್ತಿದೆಂದು ಇತಿಹಾಸಕಾರರು ಹೇಳುತ್ತಾರೆ. ದೇವಾಲಯದಲ್ಲಿ ಪ್ರಾಣಿ ಬಲಿ  ನಿಂತ ಬಗ್ಗೆ ಒಂದು ಕಥೆಯಿದೆ ಬನ್ನಿ ಅದನ್ನು ತಿಳಿಯೋಣ.





ಪೌರಾಣಿಕ ಕಲ್ಪನೆಯ ಚಿತ್ರ.


ಆಗ ನಮ್ಮ ದೇಶದಲ್ಲಿ  "ಮಹಾತ್ಮಾ ಗಾಂಧೀ ಜಿ"  ಯವರ ಅಲೆ ಎದ್ದಿದ್ದ ಕಾಲ..ಗಾಂಧೀಜಿ ತತ್ವಗಳು ಹಳ್ಳಿ ಹಳ್ಳಿಗೂ ಮುಟ್ಟುತ್ತಿದ್ದವು,ಇವುಗಳಿಂದ  ಪ್ರಭಾವಿತರಾಗಿ  ಹಲವು ಜನ ಅಹಿಂಸಾ ವಾದದತ್ತ  ಸಮಾಜವನ್ನು ಕೊಂಡೊಯ್ಯಲು ಪ್ರಯತ್ನಿಸಿದರು . ಆಗ ಶಿರಸಿಯಲ್ಲಿ ಕಾಣಿಸಿದವರೆ  ಎಸ.ಏನ್.ಕೆಶ್ವಿನ್ [S.N Keshwain] ರವರು ಮೊದಲು ಶಿರಸಿಯ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ  ನಿಲ್ಲಿಸಲು  ನಿರ್ಧರಿಸಿದರು.ಜೊತೆಗೆ ಅಂದಿನ ದಿನಗಳಲ್ಲಿ  ಇವರೇ ದೇವಾಲಯದ ಮುಖ್ಯ ಟ್ರಸ್ಟಿ ಆಗಿದ್ದರು,  ಇವರ ಜೊತೆ ಸಾಥ್ ನೀಡಿದ್ದು ಮತ್ತೊಬ್ಬ   ಗಾಂಧೀವಾದಿಯಾಗಿದ್ದ  ಶ್ರೀ ವಿಟ್ಟಲ್ ರಾವ್  ಹೊದಿಕೆ   {vitthal rao hodike} .ವೃತ್ತಿಯಿಂದ ಉಪಾಧ್ಯಾಯರಾಗಿದ್ದ ಶ್ರೀ ವಿಟ್ಟಲ್ ರಾವ್  ಹೊದಿಕೆ   ರವರು ಪ್ರಾಣಿ ಬಲಿ   ವಿರುದ್ಧ ಜನ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತರು. S.N Keshwain   ರವರು ಪ್ರಾಣಿ  ಬಲಿಗೆ ತಂದಿದ್ದ  ಕೋಣವನ್ನು  ಬಲಿ ಕೊಡುವ ದಿನದ  ಹಿಂದಿನ  ರಾತ್ರಿ ಅಪಹರಿಸಿ  , ಬಲಿಯನ್ನು ತಪ್ಪಿಸುತ್ತಾರೆ. ಕೋಪಗೊಂಡು ಗಲಾಟೆ ಮಾಡಲು ಸಿದ್ದವಾಗಿದ್ದ  ಅಪಾರ ಸಂಖ್ಯೆಯ  ಭಕ್ತರನ್ನು ತನ್ನ ಅಸಾಧ್ಯ  ಧೈರ್ಯ  ಹಾಗು ಜಾಣ್ಮೆಯಿಂದ ಸಮಾಧಾನ ಪಡಿಸಿ ಮೊದಲ ಹೆಜ್ಜೆ ಇಡುತ್ತಾರೆ. 1933 ರಲ್ಲಿ  ಮಹಾತ್ಮಾ ಗಾಂಧೀಜಿ ಯವರು ಶಿರಸಿಗೆ ಆಗಮಿಸಿದಾಗ  ಶಿರಸಿಯ ಮಾರಿಕಾಂಬೆ ದೇಗುಲದಲ್ಲಿ ಪ್ರಾಣಿ ಬಲಿ ನೀಡುವ ವಿಚಾರ ತಿಳಿದು  ಆ ದೇವಾಲಯಕ್ಕೆ ಬರಲು ನಿರಾಕರಿಸುತ್ತಾರೆ. ಇದರಿಂದ ನೊಂದ ಶಿರಸಿಯ ನಾಗರೀಕ ಜನತೆ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ ಕೊಡುವುದನ್ನು  ನಿಲ್ಲಿಸಲು ಮನಸು ಮಾಡಿ  ಅದರಲ್ಲಿ ಯಶಸ್ವಿಯಾಗುತ್ತಾರೆ. ಭಕ್ತಾದಿಗಳು ನೀಡಿದ ದೇಣಿಗೆಯನ್ನು ಶೈಕ್ಷಣಿಕ ಕಾರ್ಯಗಳಿಗೆ ಬಳಸಿ ಸಮಾಜದ ಉದ್ದಾರಕ್ಕೆ ಅಡಿಗಲ್ಲು ಹಾಕುತ್ತಾರೆ.  ಮತ್ತೊಂದು ವಿಶೇಷ ಇಂದು  ಈ ದೇವಾಲಯದ ಟ್ರಸ್ಟ್  ಹಲವು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅಂದಿನ ಬಾಂಬೆ ಪ್ರಾಂತದಲ್ಲಿ  ದೇವಾಲಯ ಪ್ರವೇಶಕ್ಕೆ  ಹರಿಜನರಿಗೆ ಅನುವುಮಾಡಿಕೊಟ್ಟ ಮೊದಲ ದೇವಾಲಯ  ಈ ಮಾರಿಕಾಂಬೆ ದೇಗುಲ. ಈ ವಿಚಾರದ ಬಗ್ಗೆ ಮಹಾತ್ಮಾ ಗಾಂಧೀಜಿ ತೃಪ್ತರಾಗಿ ತಮ್ಮ "ಹರಿಜನ " ಪತ್ರಿಕೆಯಲ್ಲಿ ಲೇಖನ ಬರೆದು ದೇಶಕ್ಕೆ  ಶಿರಸಿ ಕ್ರಾಂತಿಯನ್ನು ದೇಶಕ್ಕೆ ತಿಳಿಸುತ್ತಾರೆ.




ಜಾತ್ರೆ ಸಮಯದಲ್ಲಿ ಗರ್ಭಗುಡಿ ಹೀಗಿತ್ತು.




ಬನ್ನಿ ಗುಡಿಯ ಇತಿಹಾಸ ತಿಳಿಯಿರಿ.

 ಇತಿಹಾಸ ಮೆಲುಕುಹಾಕುತ್ತಾ  ದೇವಾಲಯದ ಗರ್ಭಗುಡಿ ಬಳಿ  ಬಂದೆವು, ದೇವಿಯು ಜಾತ್ರೆ ಮಾಳದಲ್ಲಿ  ವಿರಾಜಮಾನವಾಗಿದ್ದ  ಕಾರಣ ಗರ್ಭಗುಡಿ ಮುಚ್ಚಿತ್ತು . ಬೆಳ್ಳಿಯ ಬಾಗಿಲುಗಳ ದರ್ಶನ ಪಡೆದು  ದೇವಾಲಯದಿಂದ  ಹೊರಬಂದೆವು  ಹೊರಗೆ ಕಂಡ ಆನೆಯ ವಿಗ್ರಹ  ಬನ್ನಿ ಭಕ್ತರೆ ದೇವಾಲಯದ ಇತಿಹಾಸ ತಿಳಿಯಿರಿ ಎಂದು ಕರೆಯುತ್ತಿರುವಂತೆ ಬಾಸವಾಯಿತು.


ಭೂತ ರಾಜ 




ಮತ್ತೊಮ್ಮೆ ಬನ್ನಿ 


ಹೊರಗೆ ಬಂದ ನನಗೆ ಈ ದೇವಾಲಯದ ಅದ್ಭುತ ಹಿನ್ನೆಲೆ ಪರಿಚಯವಾಗಿ  ರೋಮಾಂಚನ ಆಗಿತ್ತು. ಮುಂದುವರೆದು  ಅಲ್ಲೇ ಮುಂಭಾಗದಲ್ಲಿ ಭೂತರಾಜನ ಪೂಜೆಯನ್ನು ಭಕ್ತಾದಿಗಳು ಮಾಡುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು  . ಭೂತರಾಜನ ಗುಡಿಯ  ಹಿಂಭಾಗದಲ್ಲಿ ಪಾರ್ಕಿನಲ್ಲಿದ್ದ  ಮೂರ್ತಿಗಳು ಮತ್ತೊಮ್ಮೆ ಬನ್ನಿ ಇಲ್ಲಿಗೆ ಎಂದು ಕರೆದಂತೆ ಅನ್ನಿಸಿ ಅಲ್ಲಿಂದ  ಹೊರಟೆ. "ರೀ ಹರ್ಷ ನಿಮಗೆ ಥ್ಯಾಂಕ್ಸ್ ಕಣ್ರೀ"   "ಒಳ್ಳೆಯ ದೇವಾಲಯ ಪರಿಚಯ ಮಾಡಿಸಿದಿರಿ",ಎಂದೇ..............!   "ಬಾಲೂ ಸಾರ್,  "ಬನ್ನಿ  ಸಾರ್",  "ಇದು ನಮ್ಮೂರು ಇದನ್ನು ತೋರಿಸೋದು ನಮಗೆ  ಹೆಮ್ಮೆಯ ವಿಷ್ಯಾ"   ಅಂದ ಪುಣ್ಯಾತ್ಮ.  ಸಾರ್ ಮದುವೇ  ಮನೆಗೆ ಹೋಗೋಣ ಬನ್ನಿ ಅಂತಾ ಬೈಕ್  ಸ್ಟಾರ್ಟ್ ಮಾಡಿದ  ಶಿರಸಿಯಿಂದ ಹೋರಾಟ ಬೈಕು  "ಕೊಳಗೀ ಬೀಸ್ " ಕಡೆಗೆ ಹೊರಟಿತು.........................!!!



12 comments:

Srikanth Manjunath said...

ನಾ ನೋಡಿದ ಮಾರಿಕಾಂಬೆ ಸುಂದರ..ನೀವು ನುಡಿದು ತೋರಿಸಿದ ಮಾರಿಕಾಂಬೆ ಇನ್ನಷ್ಟು ಸುಂದರ ಅಮೋಘ...ದೇವಾಲಯದ ಇತಿಹಾಸ, ಚಿತ್ರಗಳು, ಅದರ ಇತಿಹಾಸ, ನೋಡಿದಷ್ಟು ಸೊಗಸು, ನಿಮ್ಮ ಬರಹಗಾರಿಕೆ ಎಂಥಹವರನ್ನು ಸೆಳೆಯುತ್ತದೆ. ಚಿತ್ರಗಳು ಅದಕ್ಕೆ ತಕ್ಕ ಶೀರ್ಷಿಕೆಗಳು, ಅದಕ್ಕೆ ತಕ್ಕ ಇತಿಹಾಸ ಎಲ್ಲವು ತಾಳಕ್ಕೆ ಮೇಳ ಸೇರಿದಂತೆ ಸುಲಲಿತವಾಗಿದೆ.

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಬರಲಿ ಬರಲಿ ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ..

shishir said...

ನಾನು ಮೂಲತಹ ಸಿರಸಿಯವನಾದರೂ ಶ್ರೀ ಮಾರಿಕಾಂಬ ದೇವಾಲಯದ ಬಗ್ಗೆ ಇಷ್ಟೊಂದು ಯೋಚನೆಮಾಡಿರಲಿಲ್ಲ :)
ಅದ್ಭುತವಾದ ನಿರೂಪಣೆ, very informative.. :)

umesh desai said...

good info revived my visit some time back

ಚಿನ್ಮಯ ಭಟ್ said...

ಬಾಲು ಸರ್,

ಶಿರಸಿಯ ಮಾರಿಕಾಂಬೆಯ ಕಥೆ ಹೀಗೆದೆಯಂತೆ..ನನಗೂ ಪೂರ್ತಿಯಾಗಿ ನೆನಪಿಲ್ಲ ,ತಪ್ಪಿದ್ದಲ್ಲಿ ಕ್ಷಮಿಸಿ..ನಮಗೆ ಪ್ರಾಥಮಿಕ ಶಾಲೆಯ ಅಕ್ಕೋರು(ಶಿಕ್ಷಕಿಗೆ ನಮ್ಮ ಕಡೆ ಹೇಳುವ ಹೆಸರು) ಹೇಳಿದ್ದು...

"ಮಾರಿಕಾಂಬೆಯು ಬ್ರಾಹ್ಮಣರ ಕನ್ಯೆಯಾಗಿರುತ್ತಾಳೆ..ಆಕೆಯನ್ನು ಒಬ್ಬ ಸುಳ್ಳು ಹೇಳಿ ತಾನು ಬ್ರಾಹ್ಮಣನೆಂದು ನಂಬಿಸಿ ಮದುವೆಯಾಗುತ್ತಾನೆ..ಮುಂದೆ ಮಕ್ಕಳಾಗುತ್ತವೆ..ಒಮ್ಮೆ ಹೀಗೆ ಮಕ್ಕಳು ಆಟವಾಡುತ್ತಾ ಇರುವಾಗ ಅವರು ಹಲಸಿನ ಎಲೆಯಲ್ಲಿ ಚಪ್ಪಲಿಯನ್ನು ಹೊಲಿಯುತ್ತಿರುವುದನ್ನು ಕಂಡು ಏನಿದು ಎಂದು ಮಕ್ಕಳನ್ನು ಕೇಳಲಾಗಿ ಅವು ಅಪ್ಪನನ್ನು ನೋಡಿ ಕಲಿತುದದಾಗಿ ತಿಳಿಯುತ್ತದೆ..ಇದರಿಂದ ತನ್ನ ಪತಿಯು ಚಮ್ಮಾರನೂ,ತನಗೆ ಸುಳ್ಳು ಹೇಳಿದ್ದಾನೆಂದೂ ತಿಳಿದ ಆ ಕನ್ಯೆ ಮಾರಮ್ಮ ನಾಗುತ್ತಾಳೆ..ಆ ಮೇಲೆ ಆತ ಎಮ್ಮೆಯ ರೂಪವನ್ನು ಧರಿಸಲು ಆಕೆ ಆ ಎಮ್ಮೆಯನ್ನು ಕೊಲ್ಲುತ್ತಾಳೆ"

ಇದು ನನಗೆ ನೆನಪಿರುವ ಮಟ್ಟಿಗಿನ ಕಥೆ...ಇಲ್ಲಿ ಯಾವುದೇ ಜಾತಿಯನ್ನು ಕೀಳೆಂದು ಹೇಳುವ ಉದ್ದೇಶ ಇಲ್ಲ..

ಮತ್ತೆ ಇನ್ನು ಜಾತ್ರೆಯ ಹಿಂದಿನ ದಿನ ನಾಡಿಗರ ಗಲ್ಲಿಗೆ ಅಮ್ಮನವರು ಬರುತ್ತಾರೆ..ಅಲ್ಲಿ ಬಳೆತೊಡಿಸುವ ಶಾಸ್ತ್ರ ನಡೆಯುತ್ತದೆ,ಹೋಳಿಗೆಯ ಊಟವೂ ಇರುತ್ತದೆ..ಆಮೇಲೆ ಮರುದಿನ ಗದ್ದುಗೆಯ ಮೇಲಿರುತ್ತಾರೆ ಅಮ್ಮನವರು..

ಹಾಂ ಇದೊಂದು ನಮ್ಮ ಕಡೆ ಪ್ರಚಲಿತವಿರುವ ಸಂಗತಿ...ಅಮ್ಮನವರನ್ನು ಜಾತಾ ಮಂಟಪದಿಂದ ಕೆಳಗಿಳಿಸುವಾಗ ಮಂಟಪಕ್ಕೆ ತಾನಾಗಿಯೇ ಬೆಂಕಿ ಬೀಳುತ್ತದಂತೆ...ಮತ್ತೆ ದೇವರ ಕಣ್ಣುಗಳಿಗೆ ಬಣ್ಣ ಬಳಿಯುವಾಗ ನೇರವಾಗಿ ಅದನ್ನು ನೋಡಿದರೆ ಕಣ್ಣು ಕುರುಡಾಗುವುದಂತೆ,ಅದಕ್ಕಾಗಿ ಅವರು ಕನ್ನಡಿಯನ್ನಿಟ್ಟುಕೊಂಡು ಬಳಿಯುತ್ತಾರಂತೆ.. ಹೀಗೆ ಸುಮಾರು ಕಥೆಗಳು ಚಾಲ್ತಿಯಲ್ಲಿವೆ..
ಶಿರಸಿಯ ಈ ಜಾತ್ರೆ ಕರ್ನಾಟಕ ಅತೀ ದೊಡ್ಡ ಜಾತ್ರೆಯಂತೆ..ಸುಮಾರು ೨ ಲಕ್ಷಕ್ಕೂ ಹೆಚ್ಚು ಜನ ಸೇರುವ ಈ ಜಾತ್ರೆ ಎರಡು ವರುಷಕ್ಕೊಮ್ಮೆ ನಡೆಯುತ್ತದೆ...

ಜೊತೆಗೆ ದಸರಾ,ದೀಪಾವಳಿಯಲ್ಲಿಯೂ ಸಹ ವಿಶೇಷ ಕಾರ್ಯಕ್ರಮಗಳಿರುತ್ತವೆ...

ಕೊನೆಗೊಂದು ಮಾತು..."ಜಾತ್ರೆಯ ದಿನ"ಗಳನ್ನು ನೆನಪಿಸಿದರಿ...ಅದನ್ನು ಹೇಳಲು ಜಾಗ ಸಾಲದು ಇಲ್ಲಿ...

ಲೇಖನ ಇಷ್ಟವಾಯ್ತು...ಬರೆಯುತ್ತಿರಿ...
ಖುಷಿಯಾಯ್ತು ಓದಿ...

ಸುಬ್ರಮಣ್ಯ said...

ಅನೇಕ ವಿಷಯ ಗೊತ್ತಾಯಿತು

Manjunatha Kollegala said...

ಸೊಗಸಾದ ನಿರೂಪಣೆ, ಸುಂದರವಾದ ಚಿತ್ರಗಳು. ಮಾಹಿತಿಯುಕ್ತ ಬರಹ

ಸುಮ said...

ನನ್ನ ಹುಟ್ಟೂರಿನ ಪಕ್ಕದ ತಾಲೂಕಾದರೂ ಶಿರಸಿಯ ಬಗ್ಗೆ ಇಷ್ಟೊಂದು ವಿಚಾರಗಳು ತಿಳಿದಿರಲಿಲ್ಲ. ಒಳ್ಳೆಯ ಲೇಖನ ಮಾಲಿಕೆ ಬಾಲು ಸರ್ :)

Badarinath Palavalli said...

ಪಯಣ ೧೨ ವಿವರಗಳ ಹೂರಣ.

ಕಾವಿ ಕಲೆಯ ಬಗ್ಗೆ ನನಗೆ ತಿಳಿದಂತಾಯ್ತು. ಈ ಪ್ರಕಾರವು ತುಸು ಗಂಜೀಫಾ ಪದ್ಧತಿಯನ್ನು ಹೋಲುತ್ತದೆ ಅಲ್ಲವೇ ಸಾರ್?

ನಿಮ್ಮ ಅನುಮತಿ ಇಲ್ಲದೆ ಕನ್ಯಕಾ ಪರಮೇಶ್ವರಿ ಚಿತ್ರವನ್ನು ಡೌನ್ ಲೋಡ್ ಮಾಡಿಟ್ಟುಕೊಂಡೆ.

ಗ್ರಾಮ ದೇವತೆಗಳು ಹೇಗೆ ಕಾಲಾನಂತರ ಮಾರಿಕಾಂಬೆಯಾಯಿತು ಅಲ್ಲವೇ ಸಾರ್?

ಪ್ರಾಣಿ ಬಲಿ ನಿಂತ ಕಥೆ ಮತ್ತು ತತ್ಸಂಬಂಧಿ ಚಿತ್ರವೂ ಮನಮುಟ್ಟುವಂತಿದೆ.

ಕೊಳಗೀ ಬೀಸ್ ಬರಹಕ್ಕಾಗಿ ಕಾಯುತ್ತೇವೆ.

shivu.k said...

ಬಾಲು ಸರ್,
ಸಿರಸಿಯ ದೇವಸ್ಥಾನದ ಕಾವಿಕಲೆ ವಿಚಾರ ಗೊತ್ತಿರಲಿಲ್ಲ. ನಾನು ಅವುಗಳ ಅನೇಕ ಚಿತ್ರಗಳನ್ನು ಕ್ಲಿಕ್ಕಿಸಿದ್ದರೂ ಕೊಂಕಣಿ ಜನಾಂಗದವರ ಕಾವಿಕಲೆ ಈಮಟ್ಟಕ್ಕೆ ಅನ್ನುವ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

ದಿನಕರ ಮೊಗೇರ said...

Sirsi itihaasa nimma baraha odi toLiyitu.....

bartaa iddeve nimma jote....
munde hogi sir...

Anonymous said...

OMG ! I simply found a error within your site! Check if your plugins is configured correctly!

ಜೋಗಿತಿ said...

ನಮ್ಮ ಜಿಲ್ಲೆಯನ್ನು ತುಂಬಾ ಸುಂದರವಾಗಿ ಪರಿಚಯಿಸುತ್ತಿರುವ ನಿಮಗೆ ಅಭಿನಂದನೆ.... :)