Sunday, January 26, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...9 ಬಾರಪ್ಪಾ ಬಾ ಎಂದು ಕರೆದಿತ್ತು ಬಾ ಬಾ ಬುಡನ್ ಗಿರಿ .!

ಹೊನ್ನಮ್ಮ ದೇವಿ


ಕಳೆದ ಸಂಚಿಕೆಯಲ್ಲಿ ಮುಳ್ಳಯ್ಯನ ಗಿರಿ , ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ ಹೋಗಿದ್ದು ನಿಮಗೆ ಗೊತ್ತು, ಬನ್ನಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾಗಿ , ಮುಂದೆ ಹೊರಟ   ನಾವು ತಲುಪಿದ್ದು "ಹೊನ್ನಮ್ಮನ ಹಳ್ಳ"  ಎಂಬ ಸಣ್ಣ ಜಲಪಾತ ದ ದರ್ಶನಕ್ಕೆ , ಮುಳ್ಳಯ್ಯನ  ಗಿರಿಯಿಂದ ಬಾ ಬಾ ಬುಡನ್ ಗಿರಿಗೆ ತೆರಳುವ ದಾರಿಯಲ್ಲಿ ಅತ್ತಿಗುಂಡಿ ಎಂಬ ಊರು ಸಿಗುತ್ತದೆ , ಅದರ ಸನಿಹದಲ್ಲೇ ಇದೆ ಈ "ಹೊನ್ನಮ್ಮನ ಹಳ್ಳ"  ಜಲಪಾತ , ಸಾಮಾನ್ಯವಾಗಿ ಚಿಕ್ಕ ಮಗಳೂರಿನ  ಪ್ರೇಕ್ಷಣೀಯ  ಸ್ಥಳ   ವಿವರವಾಗಿ ನೋಡಲು  ಪ್ರತೀ ಸ್ಥಳಕ್ಕೂ  ದಿನಗಳೇ ಬೇಕಾಗುತ್ತದೆ , ನಮಗೆ ಇದ್ದ ಅಲ್ಪ ಸಮಯದಲ್ಲೇ   ಇವುಗಳನ್ನು ನೋಡಬೇಕಾದ ಕಾರಣ ಹೆಚ್ಚು ವಿಚಾರ ಕೆದಕಲು ಆಗಲಿಲ್ಲ ಹಾಗು ನೋಡಲೂ ಸಹಾ  ಅವಕಾಶ ಸಿಗಲಿಲ್ಲ . 



ಹೊನ್ನಮ್ಮನ ಹಳ್ಳ  ಸೇತುವೆ



ಹೊನ್ನಮ್ಮ ದೇವಿ ದರ್ಶನ



"ಹೊನ್ನಮ್ಮನ ಹಳ್ಳ " ಪಶ್ಚಿಮ ಘಟ್ಟದ ಬೆಟ್ಟ  ಗುಡ್ಡ ಗಳಿಂದ ಹರಿದು ಬರುವ ಜರಿ ಗಳಿಂದ ಹರಿದು ಬರುವ ಜಲಧಾರೆ ಅಷ್ಟೇ , ಪ್ರತೀ ಪ್ರದೇಶಕ್ಕೂ , ಅದು ಕಾನನವೇ  ಆಗಿರಲಿ ಅಥವಾ ನಾಡೆ ಆಗಿರಲಿ , ಅಲ್ಲಿನ ಜನರ ನಂಬಿಕೆಗೆ  ತಕ್ಕಂತೆ ಅಲ್ಲಿ ಒಂದು ಶಕ್ತಿ ದೇವತೆ  ಇರುವುದನ್ನು ಕಾಣಬಹುದು , ಈ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಜನರ ಆರಾಧ್ಯ ದೇವತೆ ಹೊನ್ನಮ್ಮ  ಅದರಂತೆ ಅಲ್ಲಿ ದುಮ್ಮಿಕ್ಕುವ ಜಲಪಾತಕ್ಕೆ  ಹೊನ್ನಮ್ಮನ  ಹಳ್ಳ ಎಂದು  ಕರೆದಿದ್ದಾರೆ . ನಿಸರ್ಗದಿಂದ  ಬರುವ ಈ  ಜಲಪಾತದ ನೀರನ್ನು ಸಾರ್ವಜನಿಕರು  ದಾಟಿ ಓಡಾಡಲು ಅಂದಿನ ಮೈಸೂರು ಸರ್ಕಾರ  ಇಲ್ಲಿ ಒಂದು ಸೇತುವೆ ನಿರ್ಮಾಣ ಮಾಡಿದೇ .



ಹೊನ್ನಮ್ಮನ ಹಳ್ಳದ  ನೋಟ



ನೀರಲ್ಲಿ ಮಿಂದು ಪುನೀತರಾಗಿ

ಪಯಣದ  ಹಾದಿಯಲ್ಲಿ  ಈ ಜಲಪಾತದಲ್ಲಿ ಮಿಂದು  ಆಯಾಸ ಪರಿಹರಿಕೊಳ್ಳಲು ಈ ಸ್ಥಳ  ಒಳ್ಳೆಯದು , ಈ ಹಾದಿಯಲ್ಲಿ ಪಯಣಿಸುವ ಪ್ರವಾಸಿಗಳು  ಇಲ್ಲಿ ಇಳಿಯದೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹಸಿರ ಸಿರಿಯ ನಡುವೆ ಹಿತವಾದ  ವಾತಾವರಣ ಇರಲು ಹೊನ್ನಮ್ಮನ ಹಳ್ಳ ಜಲಪಾತ  ನಿಮಗೆ ಸೌಂದರ್ಯದ  ದರ್ಶನ ಮಾಡಿಸುತ್ತದೆ . ನಾವಿಲ್ಲಿ ಸ್ವಲ್ಪ ಸಮಯ ಕಳೆದು ಉಲ್ಲಾಸದಿಂದ   ಬಾ ಬಾ ಬುಡನ್ ಗಿರಿಯ ನೋಡಲು ತೆರಳಿದೆವು,



ರಸ್ತೆಯಲ್ಲದ  ರಸ್ತೆ
ಹದಗೆಟ್ಟ  ಹಾದಿಯಲ್ಲಿ ಬಸವಳಿದ ವಾಹನಗಳು



ಬಾ ಬಾ   ಬುಡನ್ ಗಿರಿ ಕಡೆಗೆ ಹೊರಟ ರಸ್ತೆ ನಮಗೆ ಕಾರಿನಲ್ಲಿ ಕುಲುಕಾಡುತ್ತಾ ಸಾಗುವ ಅವಕಾಶ ನೀಡಿತು, ಹೌದು ಸರ್ ಹದಗೆಟ್ಟ  ರಸ್ತೆ ನಮ್ಮ  ದೇಹದ ಪ್ರತೀ ಭಾಗವನ್ನೂ  ಕುಲುಕಾಡುತ್ತಾ ತನ್ನ ಪ್ರತಾಪ ಮೆರೆದಿತ್ತು, ಹದಗೆಟ್ಟ  ಹಾದಿಯಲ್ಲಿ ಏಗಲಾರದೇ  ಬಸವಳಿದು  ಕೆಟ್ಟು ನಿಂತ ಹಲವಾರು ವಾಹನಗಳು  ಯಾರನ್ನೋ ಶಪಿಸುತ್ತ  ನಿಂತಿದ್ದವು . ಹಸಿರ ಹೊದ್ದ ಬೆಟ್ಟಗಳ  ನಡುವೆ  ಸಾಗಿದ್ದ  ಹದಗೆಟ್ಟ  ರಸ್ತೆಯಲ್ಲಿ  ಬಾ ಬಾ  ಬುಡನ್ ಗಿರಿ  ನೋಡುವ ಉತ್ಸಾಹ ಕರಗಿಹೊಗುತ್ತಿತ್ತು.



ಹಸಿರ  ನಡುವೆ  ಹಾದಿಯ ಚೆಲುವು




ಈ ಚಿತ್ರ ಹೇಗಿದೆ ...?

ಇಲ್ಲಿ ನಾವೆಲ್ಲ ಹೀರೋಗಳೇ

ಅಂತೂ ಇಂತೂ  ಹಾದಿಯ ಮದ್ಯದಲ್ಲಿ ಒಂದು ಕಡೆ ನಿಂತೆವು, ಹ ಹೌದು ಇಲ್ಲಿಂದ ಮುಂದೆ ರಸ್ತೆ ದುರಸ್ತಿ ನಡೆಯುತ್ತಿದ್ದ  ಕಾರಣ , ನಮ್ಮ ವಾಹನ ಅಲ್ಲೇ ಬಿಟ್ಟು,  ಮುಂದಕ್ಕೆ  ಅಲ್ಲಿನ ಸ್ಥಳೀಯರು  ಪ್ರವಾಸಿಗಳನ್ನು ಕರೆದೊಯ್ಯಲು  ಏರ್ಪಡಿಸಿದ್ದ  ಬೈಕ್  ಗಳಲ್ಲಿ ಅಥವಾ  ಜೀಪು ಗಳಲ್ಲಿ  ತೆರಳಬೇಕಾಗಿತ್ತು ,ನಾವು ಅಲ್ಲಿಗೆ ತಲುಪಿದಾಗ ಸಿಕ್ಕ ಒಂದು ಬೈಕ್  ನಲ್ಲಿ   ಆಗಲೇ ಒಬ್ಬರು ತೆರಳಿದ್ದರು,  ಅಗ ಅ ಬೈಕ್ ನವರು  ಸರ್ ಹಾಗೇ  ಬರ್ತಾ ಇರಿ ನಾನು  ಇವರನ್ನು ಬಿಟ್ಟು ಮತ್ತೊಂದು ಬೈಕ್ ಜೊತೆ ಬರುವೆ ಎಂದು ಹೇಳಿದ  ಮಾತನ್ನು ಕೇಳಿ ಸ್ವಲ್ಪ ದೂರ ನಡೆಯಲು ಶುರು ಮಾಡಿದೆವು, ಸಾಗುತ್ತಿರುವ  ಹಾದಿಯಲ್ಲಿ  ಫೋಟೋ ಕ್ಲಿಕ್ಕಿಸುತ್ತ  , ಕ್ಲಿಕ್ಕಿಸಿದ  ಫೋಟೋಗಳ  ಬಗ್ಗೆ ತೃಪ್ತಿ ಪಡುತ್ತಾ   ಹೋಗುತ್ತಿದ್ದೆವು,  ದಾರಿಯಲ್ಲಿ ಎದುರು ಬಂದ ಒಂದುಜೀಪಿನಲ್ಲಿ  ಸುಮಾರು ಇಪ್ಪತ್ತು ಜನ  ಬರುತ್ತಿದ್ದರು, ಒಂದಷ್ಟು ಜನರು  ತಾವು ಯಾರಿಗೂ ಕಮ್ಮಿ ಇಲ್ಲಾ  ಅಂತ  ಜೀಪಿನ ಮೇಲ್ಭಾಗದಲ್ಲಿ  ,ಬಾನೆಟ್  ಮೇಲೆಲ್ಲಾ  ಕುಳಿತು  ಬರುತ್ತಿದ್ದರು,  ಸ್ವಲ್ಪ ಎಡವಟ್ಟು ಅದರೂ  ಇವರ ಕಥೆ ಗೋವಿಂದ ಆಗ್ತಿತ್ತು, ಕೆಲವೊಮ್ಮೆ  ನಾವು ಯಾಕೆ ಹೀಗೆ ಆಡ್ತೀವಿ ಎನ್ನುವ  ಪ್ರಶ್ನೆ ಹುಟ್ಟಿತು,  ಆದರೆ   ಮನಸು  ಅವರ ಇಷ್ಟಾ , ಅವರ ಕಥೆ  ನೀನ್ಯಾರು ಕೇಳೋಕೆ  ಅಂತ ಬುದ್ದಿ ಹೇಳಿತು , ಬುದ್ದಿ ಹೇಳಿದ್ರೆ ಕೇಳುವವರು ಯಾರು ?   ನಸು ನಕ್ಕು ಮುಂದೆ ಹೋದೆ , ಅಷ್ಟರಲ್ಲಿ ನಮ್ಮನ್ನು  ಕರೆದೊಯ್ಯಲು  ಎರಡು ಬೈಕ್ ಗಳು ಬಂದವು,   ಅವುಗಳನ್ನು ಹತ್ತಿ ತಲುಪಿದ್ದು  ದತ್ತ ಪೀಠದ ಬಳಿ .


ಬಾ ಬಾ ಬುಡನ್ ಗಿರಿ  ಯಲ್ಲಿನ  ನೋಟ

ಶೀರ್ಷಿಕೆ ಸೇರಿಸಿ


ದತ್ತ ಪೀಠದ ಬಗ್ಗೆ ಎಲ್ಲರಿಗೂ ಗೊತ್ತು,  ಇದು ಹಿಂದೂ ಹಾಗು ಮುಸಲ್ಮಾನರು  ಇಬ್ಬರಿಗೂ  ನಂಬಿಕೆಯ ತಾಣ . ಬಾ ಬಾ ಬುಡನ್ ಗಿರಿ  ಗಿರಿ ಶ್ರೇಣಿ ಉತ್ತರದ  ಹಿಮಾಲಯ ಹಾಗು  ದಕ್ಷಿಣದ ನೀಲಗಿರಿ ನಡುವೆ  ಬಹು  ಎತ್ತರದ ಗಿರಿ ಧಾಮ , ಇದು  ಸಮುದ್ರ ಮಟ್ಟದಿಂದ  ೬೩೧೭  ಅಡಿ ಎತ್ತರದಲ್ಲಿದೆ  , ಇಲ್ಲಿರುವ ಗುಹೆಗಳಲ್ಲಿ ಸಾಧು  ಸಂತರು ತಪಸ್ಸು ಮಾಡುತ್ತಿದ್ದರೆಂದು   ನಂಬಲಾಗಿದೆ . ನಮ್ಮ ದೇಶಕ್ಕೆ ಕಾಫಿ  ಬೀಜದ  ಆಗಮನ ಇಲ್ಲಿಂದಲೇ ಅಯಿತೆಂಬ  ಹೆಗ್ಗಳಿಕೆ ಇದೆ, ಕೆಲವು ಧಾರ್ಮಿಕ  ಕಾರಣಗಳ  ಬಗ್ಗೆ  ಗೊಂದಲ ಇರುವ ಕಾರಣ , ಪ್ರವಾಸಿಗಳನ್ನು  ಹತ್ತಿರ ಹೋಗಲು ಬಿಡಲಿಲ್ಲ, ದೂರದಲ್ಲೇ ನೋಡಿ ಬರಬೇಕಾಯಿತು,   ಅಲ್ಲೇ ಇದ್ದ ಒಂದು ಜೀಪನ್ನು  ಬಾಡಿಗೆಗೆ ಪಡೆದು ಮಾಣಿಕ್ಯ ಧಾರಾ  ಜಲಪಾತ ನೋಡಲು  ಹೊರಟೆವು .


ಮಾಣಿಕ್ಯ ಧಾರಾ ಕಡೆಗೆ ತೆರಳುವ ಹಾದಿ

ವೀಕ್ಷಣ  ಗೋಪುರ

ಸೂಚನೆಗೆ  ಬೆಲೆ ಎಲ್ಲಿ

ಮಾಣಿಕ್ಯ ದಂತೆ  ಬೀಳುತ್ತಿತ್ತು  ಜಲಪಾತ

ಗಿಡ ಮೂಲಿಕೆ


ಮತ್ತೆ ಅದೇ ಹಸಿರ ಹೊದ್ದ ಬೆಟ್ಟಗಳ ದರ್ಶನ , ನಡುವೆ ಸಾಗಿದ್ದ  ಕಚ್ಚಾ  ಹಾದಿಯಲ್ಲಿ ಅಡ್ಡಾ  ದಿಡ್ಡಿ ಚಲಿಸಿದ್ದ   ಜೀಪು,  ಆಗಲೇ ಮುಸ್ಸಂಜೆಯ ಮಬ್ಬು ಕವಿಯುತ್ತಿತ್ತು,   ಬೇಗ ಬೇಗ  ಗಡಿಬಿಡಿಯಿಂದ ತೆರಳಿದ ನಾವು ಮಾಣಿಕ್ಯ ಧಾರಾ  ಜಲಪಾತಕ್ಕೆ  ಓಡಿದೆವು , ನಮಗಿಂತಾ ವೇಘವಾಗಿ ಕತ್ತಲೆ ಕವಿಯುತ್ತಿತ್ತು, ಅದರೂ ಮಾಣಿಕ್ಯ ಧಾರಾ  ಜಲಪಾತ  ನೋಡೇ ಬಿಟ್ಟೆವು,  ಅಲ್ಪ ಸ್ವಲ್ಪ ಉಳಿದಿದ್ದ ಮಬ್ಬು ಬೆಳಕಿನಲ್ಲಿ  ಜಲಪಾತದ  ಚಿತ್ರ ತೆಗೆದು, ಜಲಪಾತದ ನೀರನ್ನು ಸ್ಪರ್ಶಿಸಿ  ಖುಷಿಪಟ್ಟೆವು, ಮುಖಕ್ಕೆ ನೀರನ್ನು ಹಾಕಿ ತೊಳೆದೊಡನೆ ನವ ಚೈತನ್ಯ ಬಂತು , ನಮ್ಮ ಪ್ರವಾಸದ  ಎರಡನೇ ದಿನದ  ಅಂತಿಮ  ಸ್ಥಳ ಇದಾಗಿತ್ತು . ಮೆಟ್ಟಿಲು ಹತ್ತಿಮೇಲೆ ಬಂದ ನಾವು  ಮರಳಿ ಜೀಪಿಗೆ ಬರುವ  ಹಾದಿಯಲ್ಲಿ  ಕಂಡ ಗಿಡ ಮೂಲಿಕೆಗಳ ಅಂಗಡಿ  ಕೈ  ಬೀಸಿ ಕರೆದಿತ್ತು, ಆದರೆ  ಅದನ್ನು ನೋಡುವ ತಾಳ್ಮೆ ಇಲ್ಲದೆ   ವಾಪಸ್ಸು ಬರಬೇಕಾಯಿತು,



ಮತ್ತೆ ಜೀಪಿನಲ್ಲಿ ಸ್ವಸ್ಥಾನ ಸೇರಿ ನಮ್ಮ ಕಾರನ್ನು  ಸೇರಿಕೊಂಡು  ಚಿಕ್ಕಮಗಳೂರಿಗೆ  ಬಂದು ತಲುಪಿದೆವು, ಅಲ್ಲಿಂದ ಮೈಸೂರಿಗೆ ಬರುವ ಹಾದಿಯಲ್ಲಿ   ಹಿರೆಮಗಳೂರಿನಲ್ಲಿ  ಚಿನ್ಮೈ ಭಟ್ ಬಿಡುವ  ಕಾರ್ಯಕ್ರಮ  ಇತ್ತು,  ಅಲ್ಲೇ ಕಾದಿತ್ತು, ನನ್ನ ಜೀವನದ ಕನಸು ನನಸಾಗುವ  ಒಂದು  ಸನ್ನಿವೇಶ ......... !!?

































































3 comments:

ಚಿನ್ಮಯ ಭಟ್ said...

ಧನ್ಯವಾದಗಳು...
ಮಾಣಿಕ್ಯಧಾರಾದ ಚಿತ್ರ ತುಂಬಾ ಚೆನ್ನಾಗಿ ಬಂದಿದೆ :)

Srikanth Manjunath said...

ಪ್ರಕೃತಿ ಮಾತೆ ನಾ ಎಲ್ಲೂ ಹೋಗೋಲ್ಲ ನಿಮ್ಮನ್ನು ಬಿಟ್ಟು ಎಲ್ಲೂ ಹೋಗೋಲ್ಲ ಅಂತ ಹಠ ಮಾಡಿ ಕುಳಿತಿರುವಂತೆ ಭಾಸವಾಗುತ್ತದೆ ಮುಳ್ಳಯ್ಯನಗಿರಿಯಿಂದ ಬಾಬ ಬುಡನ್ ಗಿರಿಯ ಹಾದಿ. ಕಂಡಲ್ಲೆಲ್ಲ ಹಸಿರು, ಹಸಿರನ ಉಸಿರು.. ಒಂದು ಅಮೋಘ ಶಕ್ತಿ ಹುಮ್ಮಸ್ಸನ್ನು ತರುತ್ತದೆ. ಆ ಹಾದಿ ಅಲ್ಲಿನ ಪರಿಸರ.. ಮೋಡಗಳ ಚಲ್ಲಾಟ.. ಒಂದಕ್ಕಿಂದ ಒಂದು ಚಂದ. ಮಾಣಿಕ್ಯಗಳ ಸರಪಣಿಯನ್ನೇ ಪೋಣಿಸುವ ಜಲಪಾತ, ಚಿಕ್ಕದಾದರೂ ಚೊಕ್ಕದಾದ ಹೊನ್ನಮ್ಮನ ಹಳ್ಳ, ಎಲ್ಲವು ಸುಂದರವಾಗಿ ಪದಗಳನ್ನು ಹೊದ್ದು ಕೂತಿವೆ ಲೇಖನದಲ್ಲಿ.. ಪ್ರತಿ ಲೇಖನದಲ್ಲೂ ಏನಾದರು ವಿಶೇಷ ಇದುವ ನೀವು ಮಾಣಿಕ್ಯಧಾರಾ ಜಲಪಾತದ ಸುಂದರ ದೃಶ್ಯ ನಮಗಾಗಿ ಇಟ್ಟಿದ್ದೀರಾ. ಸೂಪರ್ ಸರ್ಜಿ ಸೂಪರ್

Badarinath Palavalli said...

ಬಾಬಾ ಬುಡನ್ ಗಿರಿ ಮತ್ತು ದತ್ತ ಪೀಠ ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತದೆ, ರಾಜಕೀಯ ಕಾರಣಗಳಿಂದ!
ಆದರೆ ನಿಮ್ಮ ಈ ಬರಹ ಅಲ್ಲಿನ ಮನೋಹರತೆಯನ್ನು ಸಮರ್ಥವಾಗಿ ಬಿಂಬಿಸಿದೆ.
ಜಲಜಲಧಾರೆ ಅಮೋಘ.
ಜೀಪಿನ ಚಿತ್ರ ಮತ್ತು ರಸ್ತೆಯ ಚಿತ್ರಣ, ಬಹುಶಃ ನಮ್ಮೆಲ್ಲ ಬೆಟ್ಟಗಳ ರಸ್ತೆಗಳ ದುಸ್ಥಿತಿ ಇಂತೇ ಏನೋ.
ಎಲ್ಲ ಚಿತ್ರಗಳೂ ಬೊಂಬಾಟು.
ಮುಂದುವರೆಯಲಿ...